ಪೂಜಾ ಆಚಾರ್ಯರಿಗೆ ನ್ಯಾಯ ಕೊಡಿಸುವವರೆಗೆ ಹೋರಾಟ : ಕೆ ಪಿ ನಂಜುಂಡಿ
ಪೂಜಾ ಆಚಾರ್ಯರಿಗೆ ನ್ಯಾಯ ಕೊಡಿಸುವವರೆಗೆ ಹೋರಾಟ : ಕೆ ಪಿ ನಂಜುಂಡಿ
ಬೆಂಗಳೂರು: ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ವತಿಯಿಂದ ನಗರದ ಪ್ರೆಸ್ ಕ್ಲಬ್ ಪತ್ರಿಕಾಗೋಷ್ಠಿ ಏರ್ಪಡಿಸಲಾಗಿತ್ತು.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಹಾಸಭೆಯ ಸಂಸ್ಥಾಪಕ ಅಧ್ಯಕ್ಷರಾದ ಕೆಪಿ ನಂಜುಂಡಿ ಮಾತನಾಡಿ, ಪುತ್ತೂರಿನ ಬಡ ಹೆಣ್ಣುಮಗಳಾದ ಪೂಜಾ ಆಚಾರ್ಯರ ಮೇಲೆ ಅತ್ಯಾಚಾರ ಎಸಗಿ ಒಂದು ಗಂಡು ಮಗುವಿನ ಹುಟ್ಟಿಗೆ ಕಾರಣನಾದ ಶ್ರೀಕೃಷ್ಣ ಜೆ. ರಾವ್ ಹಾಗೂ ಉಳಿದ ಆರೋಪಿಗಳಾದ ತಂದೆ ಪಿ.ಜಿ. ಜಗನ್ನಿವಾಸ ರಾವ್, ಸಹೋದರಿ ವೈಷ್ಣವಿ ಪಿ.ಜಿ. ರಾವ್ ಮತ್ತು ದೊಡ್ಡಪ್ಪ ಚಂದ್ರಶೇಖರ್ ಪಿ.ಜಿ. ಅವರು ನ್ಯಾಯಾಲಯದ ಆದೇಶವನ್ನು ಧಿಕ್ಕರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಲವಾರು ದಿನಗಳಿಂದ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಕಳೆದ ಏಪ್ರಿಲ್ 24ರಂದು ಘನ ಉಚ್ಚ ನ್ಯಾಯಾಲಯವು ಆರೋಪಿಯಾದ ಪಿ.ಜಿ. ಶ್ರೀಕೃಷ್ಣ ರಾವ್ ಅವರಿಗೆ ಮಧ್ಯಂತರ ತಡೆಯಾಜ್ಞೆಯನ್ನು ಷರತ್ತುಬದ್ಧವಾಗಿ ನೀಡಿತ್ತು. ನ್ಯಾಯಾಲಯದ ಷರತ್ತಿನ ಪ್ರಕಾರ ಮೇ 1ರಂದು 75 ಸಾವಿರ ರೂ.ಗಳನ್ನು ಹಾಗೂ ಕೇಸ್ನ ಅಂತಿಮ ತೀರ್ಪು ಬರುವವರೆಗೂ ಪ್ರತಿ ತಿಂಗಳು 75 ಸಾವಿರ ರೂ.ಗಳನ್ನು ದೂರುದಾರರಾದ ಪೂಜಾ ಆಚಾರ್ಯ ಮತ್ತು ಮಗುವಿನ ಜೀವನೋಪಾಯ ಹಾಗೂ ಕಲ್ಯಾಣಕ್ಕಾಗಿ ನೀಡುವಂತೆ ಆದೇಶಿಸಲಾಗಿತ್ತು ಎಂದು ಹೇಳಿದರು.
ಆದರೆ ಮೇ 1ರಂದು ನೀಡಬೇಕಿದ್ದ 75 ಸಾವಿರ ರೂ.ಗಳನ್ನು ಇದುವರೆಗೆ ನೀಡದೇ, ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿರುವುದು ಖಂಡನೀಯ. ಪೂಜಾ ಆಚಾರ್ಯರು ಹಿಂದುಳಿದ ವರ್ಗದ ವಿಶ್ವಕರ್ಮ ಸಮಾಜಕ್ಕೆ ಸೇರಿದ್ದು, ನಾವು ಅವರ ಸಂಬಂಧಿಕರಲ್ಲದಿದ್ದರೂ ಸಮಾಜದ ಮೇಲೆ ನಡೆಯುವ ಅನ್ಯಾಯವನ್ನು ನೋಡುತ್ತಾ ಸುಮ್ಮನಿರುವುದಿಲ್ಲ ಎಂದು ತಿಳಿಸಿದರು.
ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯವು ಸಂತ್ರಸ್ತೆಗೆ ನ್ಯಾಯ ಒದಗಿಸುವುದರ ಜೊತೆಗೆ ಆರೋಪಿಗಳಿಗೆ ತಕ್ಕ ಶಿಕ್ಷೆಯನ್ನು ನೀಡುತ್ತದೆ ಎಂಬ ನಂಬಿಕೆ ರಾಜ್ಯದ ಜನತೆಯಲ್ಲಿದೆ. ಪೂಜಾ ಆಚಾರ್ಯ ಮತ್ತು ಮಗುವಿಗೆ ನ್ಯಾಯ ದೊರೆಯುವವರೆಗೆ ವಿಶ್ವಕರ್ಮ ಸಮಾಜ ಸೇರಿದಂತೆ ವಿವಿಧ ಸಂಘಟನೆಗಳು ಕಾನೂನುಬದ್ಧ ಹೋರಾಟ ಮುಂದುವರಿಸಲಿವೆ ಎಂದು ಎಚ್ಚರಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಸ್ವಾಮೀಜಿಗಳು, ಮುಖಂಡರು ಸೇರಿದಂತೆ ಇತರರು ಭಾಗವಹಿಸಿದ್ದರು.

Comments
Post a Comment